
ಕನ್ನಡ ಬಿಂಬ, ಬೀದರ್
ಯುವ ಮನಸ್ಸುಗಳನ್ನು ಒಳಗೊಂಡಿರುವ ಬೀದರ್ ರೋಟರಿ ಕ್ಲಬ್ ಸಿಲ್ವರ್ ಸ್ಟಾರ್, ಬಿದರಿ ವೃತ್ತದ ಸುತ್ತ ಸಸಿಗಳನ್ನು ನೆಡುವ ಮೂಲಕ ನಗರದ ಸೌಂದರ್ಯ ಹೆಚ್ಚಿಸಲು ಮುಂದಾಗಿದೆ.
ಜಿಲ್ಲೆಯ ಹೆಮ್ಮೆಯ ಪ್ರತೀಕವಾದ ಬಿದರಿ ಕಲೆಯ ಸ್ಮರಣಾರ್ಥವಾಗಿ ನಗರದ ಹೈದರಾಬಾದ್ ರಸ್ತೆಯಲ್ಲಿ ನಿರ್ಮಿಸಿರುವ ಬಿದರಿ ವೃತ್ತವು ಜನಪ್ರತಿನಿಧಿಗಳ ಹಾಗೂ ಅಧಿಕಾರಿಗಳ ನಿರ್ಲಕ್ಷದಿಂದಾಗಿ ಕಳಾಹೀನವಾಗಿತ್ತು. ಈ ಹಿನ್ನೆಲೆಯಲ್ಲಿ ರೋಟರಿ ಸಿಲ್ವರ್ ಸ್ಟಾರ್ ಅಧ್ಯಕ್ಷ ಆದಿಶ್ ವಾಲಿಯವರ ನೇತೃತ್ವದಲ್ಲಿ ವೃತ್ತವನ್ನು ಶುಚಿಗೊಳಿಸಿ, ವೃತ್ತದ ಸುತ್ತ ಸಸಿಗಳನ್ನು ನೆಟ್ಟು, ಬಿದರಿ ವೃತ್ತಕ್ಕೆ ಜೀವ ತುಂಬುವ ಕಾರ್ಯ ಶುರುವಾಗಿದೆ.
ವೃತ್ತದ ಸುಂದರೀಕರಣದ ಪೋಸ್ಟರ್ ಬಿಡುಗಡೆ ಮಾಡಿ ಮಾತನಾಡಿದ ರೋಟರಿ ಇಂಟರ್ ನ್ಯಾಷನಲ್ 3160 ಜಿಲ್ಲಾ ಗವರ್ನರ್ ಎಂ.ಕೆ ರವೀಂದ್ರ ಮಾತನಾಡಿ, ಸಿಲ್ವರ್ ಸ್ಟಾರ್ ವತಿಯಿಂದ ಬಿದರಿ ವೃತ್ತವನ್ನು ಸುಂದರಿಕರಣಗೊಳಿಸಲು ಹೊರಟಿರುವುದು ಖುಷಿಯ ವಿಚಾರ ಎಂದು ಸಂತಸ ವ್ಯಕ್ತಪಡಿಸಿದರು.
ರೋಟರಿ ಸಿಲ್ವರ್ ಸ್ಟಾರ್ ಅಧ್ಯಕ್ಷ ಆದಿಶ್ ವಾಲಿ ಮಾತನಾಡಿ, ಮಹಾನಗರ ಪಾಲಿಕೆಯ ಒಡಂಬಡಿಕೆಯೊಂದಿಗೆ ಬಿದರಿ ವೃತ್ತದಿಂದ ಹತ್ತಿರದ ಫ್ಲೈಓವರ್ವರೆಗಿನ ರಸ್ತೆಯ ಸುಂದರೀಕರಣಕ್ಕಾಗಿ ಒಂದು ಮಾಡೆಲ್ ತಯಾರಿಸಿದ್ದೇವೆ. ಈ ಕಾರ್ಯವನ್ನು ಮೂರು ಹಂತಗಳಲ್ಲಿ ವಿಂಗಡಿಸಲಾಗಿದ್ದು, ಮೊದಲ ಹಂತದಲ್ಲಿ ವೃತ್ತದ ಸುತ್ತ ಸಸಿ ನೆಡಲಾಗಿದೆ. ಎರಡನೇ ಹಂತದಲ್ಲಿ ವೃತ್ತಕ್ಕೆ ಬಣ್ಣ ಹಚ್ಚಲಾಗುತ್ತದೆ. ಮೂರನೇ ಹಂತದಲ್ಲಿ ಫ್ಲೈಓವರ್ ಕೆಳಗಡೆ ಬಿದರಿ ಕಲೆ ಹಾಗೂ ಜಿಲ್ಲೆಯ ಇನ್ನಿತರ ಸಾಂಸ್ಕøತಿಕ ಚಟುವಟಿಕೆಗಳ ಪೇಂಟಿಂಗ್ ಮಾಡಿಸಲಾಗುತ್ತದೆ ಎಂದರು.
ಕಾರ್ಯದರ್ಶಿ ಕಿರಣ್ ಸ್ಯಾಮವೆಲ್ ಮಾತನಾಡಿ, ಬಿದರಿ ವೃತ್ತದ ಬ್ಯೂಟಿಫಿಕೇಷನ್ ಗಾಗಿ ವಿನೂತನ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದೇವೆ. ಜನರ ಸಹಕಾರದೊಂದಿಗೆ ನಗರದ ಅಂದವನ್ನು ಹೆಚ್ಚಿಸುವ ಕೆಲಸ ಮಾಡುತ್ತೇವೆ ಎಂದರು.
ರೋಟರಿಯ ಅಸಿಸ್ಟ್ಂಟ್ ಗವರ್ನರ್ ಹಾವಶೆಟ್ಟಿ ಪಾಟೀಲ್, ಉಪಾಧ್ಯಕ್ಷ ಆನಂದ್ ಕೊಟರ್ಕಿ, ಜಂಟಿ ಕಾರ್ಯದರ್ಶಿ ಭಾವೇಶ್ ಪಟೇಲ್, ಖಜಾಂಚಿ ಅಮರೇಶ್ ಅಭಸಂಗೆ, ಯೋಜನಾ ನಿರ್ದೇಶಕ ಆನಂದ ಕುಲಕರ್ಣಿ, ಪೂಜಾ ಕೊಂಡಿ, ಕೀರ್ತಿ ವಾಲೆ, ಸದಸ್ಯತ್ವ ಅಭಿವೃದ್ಧಿ ನಿರ್ದೇಶಕಿ ಸ್ಪೂರ್ತಿ ಧನ್ನೂರ, ಮಾಧ್ಯಮ ಸಂಯೋಜಕಿ ಸಹನಾ ಪಾಟೀಲ, ರಾಘವೇಂದ್ರ ರೆಜೆಂತಲ್, ಮನೀಶ್ ಸಿಂಧೋಲ್, ಮಂಜುನಾಥ ಖೂಬಾ, ಮಾಜಿ ಕಾರ್ಯದರ್ಶಿ ಪೂಜಾ ಸ್ಯಾಮವೆಲ್, ಸೇರಿ ಸಿಲ್ವರ್ ಸ್ಟಾರ್ ನ ಪದಾಧಿಕಾರಿಗಳು ಹಾಗೂ ಸದಸ್ಯರು ಉಪಸ್ಥಿತರಿದ್ದರು.


