
ಕನ್ನಡ ಬಿಂಬ, ಬೀದರ್
ವಿದ್ಯಾರ್ಥಿಗಳೂ ಸೇರಿದಂತೆ ಪ್ರತಿಯೊಬ್ಬರು ದೈಹಿಕ ಮತ್ತು ಮಾನಸಿಕ ಆರೋಗ್ಯ ಕಾಪಾಡಿಕೊಳ್ಳಲು ನಿಯಮಿತ ಯೋಗ, ಧ್ಯಾನದ ಜೊತೆಗೆ ಪೌಷ್ಟಿಕ ಆಹಾರ ಸೇವಿಸಬೇಕು. ಸಾಧ್ಯವಾದಷ್ಟು ಮನೆಯಲ್ಲೆ ಮಾಡಿದ ಅಡುಗೆ, ಹಣ್ಣು, ತರಕಾರಿ ಸೇವಿಸಬೇಕು ಎಂದು ಸೂರ್ಯ ಫೌಂಡೇಶನ್ ರಾಷ್ಟ್ರೀಯ ಉಪಾಧ್ಯಕ್ಷ ಅನಂತ ಬಿರಾದಾರ ಹೇಳಿದರು.
ಬೀದರ ನಗರದ ದತ್ತಗಿರಿ ಮಹಾರಾಜ ಇಂಗ್ಲಿμï ಮಾಧ್ಯಮದ ಶಾಲೆಯಲ್ಲಿ ಸೂರ್ಯ ಫೌಂಡೇಶನ್, ಇಂಟರ್ ನ್ಯಾಷನಲ್ ನ್ಯಾಚುರೋಪತಿ ಆರ್ಗನೈಜೇಶನ್ ಹಾಗೂ ಪತಂಜಲಿ ಯೋಗ ಸಮಿತಿ ಜಿಲ್ಲಾ ಘಟಕದ ವತಿಯಿಂದ ನಡೆದ ಆರೋಗ್ಯ ಜನ – ಜಾಗರಣ ಅಭಿಯಾನದಲ್ಲಿ ಅವರು ಮಾತನಾಡಿದರು.
ಅನುಭವ ಮಂಟಪದ ಅದ್ಯಕ್ಷರಾದ ಪೂಜ್ಯ ಡಾ.ಬಸವಲಿಂಗ ಪಟ್ಟದ್ದೇವರು ಹಾಗೂ ಸೂರ್ಯ ಫೌಂಡೇಶನ್ ಸಂಸ್ಥಾಪಕರಾದ ಪದ್ಮಶ್ರಿ ಜೈಪ್ರಕಾಶ ಅಗ್ರವಾಲ್ ಅವರ ಅಮೃತ ಮಹೋತ್ಸವ ನಿಮಿತ್ತ ಜಿಲ್ಲೆಯ 75 ಸ್ಥಳಗಳಲ್ಲಿ ಅಭಿಯಾನ ನಡೆಸಲು ಉದ್ದೇಶಿಸಲಾಗಿದ್ದು, 50 ನೇ ಕಾರ್ಯಕ್ರಮ ನಗರದ ದತ್ತಗಿರಿ ಮಹಾರಾಜ್ ಶಾಲೆಯಲ್ಲಿ ನಡೆಯಿತು.
ವಿದ್ಯಾರ್ಥಿಗಳು ದೈಹಿಕವಾಗಿ ಬೆಳೆಯುತ್ತಿರುವ ಹಂತದಲ್ಲಿದ್ದು, ಈ ಹಂತದಲ್ಲಿ ಬೀದಿ ಬದಿ ತಯಾರಿಸುವ ಜಂಕ್ಫುಡ್, ಕರಿದ ಮಸಾಲೆ ಪದಾರ್ಥಗಳನ್ನು ಸೇವಿಸಬಾರದು. ಆರೋಗ್ಯ ಕೈ ಕೊಟ್ಟರೆ ಶಿಕ್ಷಣ, ಜ್ಞಾನ ಪಡೆಯಲು ಸಾಧ್ಯವಾಗುವುದಿಲ್ಲ ಎಂದು ಅನಂತ ಬಿರಾದಾರ ಹೇಳಿದರು. ಯೋಗದ ಜೊತೆಗೆ ಪೌಷ್ಟಿಕ ಆಹಾರ ಸೇವಿಸಿ ಆರೋಗ್ಯದೊಂದಿಗೆ ಉತ್ತಮ ಬದುಕು ಬದುಕಬೇಕು. ಈ ದಿಸೆಯಲ್ಲಿ ಸ್ವಾಮಿ ವಿವೇಕಾನಂದರ ವಿಚಾರಗಳನ್ನು ಆದರ್ಶವನ್ನಾಗಿಸಿಕೊಂಡು ಸೂರ್ಯ ಫೌಂಡೇಶನ್ ಕಳೆದ ನಾಲ್ಕು ದಶಕಗಳಿಂದ ದೇಶಾದ್ಯಂತ ಜನಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದೆ ಎಂದರು.
ಇಂಟರ್ ನ್ಯಾಷನಲ್ ನ್ಯಾಚುರೋಪತಿ ಆರ್ಗನೈಜೇಶನ್ ಜಿಲ್ಲಾದ್ಯಕ್ಷ ಗೋರಖನಾಥ ಕುಂಬಾರ ಮಾತನಾಡಿ, ವಿದ್ಯಾರ್ಥಿಗಳು ಶಿಸ್ತು, ಸಂಯಮದಿಂದ ಜೀವನ ರೂಪಿಸಿಕೊಳ್ಳಬೇಕು ತಮ್ಮ ಅಧ್ಯಯನ ಜೊತೆಗೆ ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳಲು ಪ್ರತಿದಿನ ಯೋಗ, ಧ್ಯಾನ ಮಾಡಬೇಕು ಎಂದು ಸಲಹೆ ನೀಡಿದರು. ಪೂಜ್ಯರ ಅಮೃತ ಮಹೋತ್ಸವದ ಅಂಗವಾಗಿ ಜಿಲ್ಲೆಯಾದ್ಯಂತ ಆರೋಗ್ಯ ಜನಜಾಗರಣ ಅಭಿಯಾನದ ಮೂಲಕ ಜನಜಾಗೃತಿ ಮೂಡಿಸಲು ವಿವಿಧ ಕಾರ್ಯಕ್ರಮ ನಡೆಸಲಾಗುತ್ತಿದೆ ಎಂದರು.
ಸೂರ್ಯ ಫೌಂಡೇಶನ್ ರಾಜ್ಯ ಸಂಯೋಜಕ ಗುರುನಾಥ ರಾಜಗೀರಾ ಮಾತನಾಡಿ, ಸಮಾಜದ ಏಳಿಗೆಗಾಗಿ ತಮ್ಮ ಬದುಕನ್ನೆ ಮುಡುಪಾಗಿಟ್ಟ ನಾಡೋಜ ಡಾ.ಬಸವಲಿಂಗ ಪಟ್ಟದ್ದೇವರ ಹಾಗೂ ಪದ್ಮಶ್ರೀ ಜೈಪ್ರಕಾಶ ಅಗ್ರವಾಲ ಅವರ ಕೊಡುಗೆ ಅಪಾರವಾದದ್ದು. ಇವರಿಬ್ಬರ ಅಮೃತ ಮಹೋತ್ಸವದ ನಿಮಿತ್ತ ಜಿಲ್ಲೆಯಾದ್ಯಂತ ಜನಜಾಗೃತಿ ಕಾರ್ಯಕ್ರಮಗಳ ಮೂಲಕ ಇವರ ಸೇವೆಯನ್ನು ಮಕ್ಕಳಿಗೆ ತಿಳಿಸಲಾಗುತ್ತಿದೆ ಎಂದರು.
ಐ. ಎನ್. ಓ ರಾಜ್ಯ ಕಾರ್ಯದರ್ಶಿ ಯೋಗೆಂದ್ರ ಯದಲಾಪುರೆ, ಶಾಲೆಯ ಮುಖ್ಯಗುರುಗಳಾದ ರೂಪಾ ಜೋಶಿ, ಉಪ ಪ್ರಾಂಶುಪಾಲರಾದ ಸಂಜಿವಕುಮಾರ ನೇಳಗೆ, ರಾಜಕುಮಾರ ನೆಮತಬಾದೆ, ಆನಂದ ರೆಡ್ಡಿ ಸೇರಿದಂತೆ ಇತರರಿದ್ದರು.


