
ಕನ್ನಡ ಬಿಂಬ, ಬೀದರ್
ಪ್ರಶಸ್ತಿ ಗೌರವಗಳು ಅರ್ಹರಿಗೆ ಸಿಕ್ಕಾಗ ಅದಕ್ಕೊಂದು ಬೆಲೆ ಬರುತ್ತದೆ. ನಿಸ್ವಾರ್ಥ ಆಧ್ಯಾತ್ಮ ಸೇವೆ ಮತ್ತು ಶೈಕ್ಷಣಿಕ ಸೇವೆಯನ್ನು ಗುರುತಿಸುತ್ತಿರುವ ಸಿರಿಗನ್ನಡ ವೇದಿಕೆ ಕಾರ್ಯ ಸ್ತುತ್ಯಾರ್ಹ ಎಂದು ಹಾರಕೂಡ ಹಿರೇಮಠ ಸಂಸ್ಥಾನದ ಪೀಠಾಧಿಪತಿ ಡಾ.ಚೆನ್ನವೀರ ಶಿವಾಚಾರ್ಯರು ಹೇಳಿದರು.
ಸಿರಿಗನ್ನಡ ವೇದಿಕೆ ಮತ್ತು ಸಾಕ್ಷಿ ಪ್ರತಿ ಪ್ರತಿಷ್ಠಾನ ಕಲಬುರಗಿ ಕೊಡಮಾಡುವ ಲಿಂ. ಶ್ರೀ ಸಿದ್ಧೇಶ್ವರ ಆಧ್ಯಾತ್ಮ ರತ್ನ ಪ್ರಶಸ್ತಿಯನ್ನು ಹಾರಕೂಡದ ಹಿರೇಮಠದಲ್ಲಿ ಶ್ರೀ ಮಲ್ಲಿನಾಥ ಹಿರೇಮಠ ಮತ್ತು ಶ್ರೀಮತಿ ಹೇಮಲತಾ ಹಿರೇಮಠ ದಂಪತಿಗಳಿಗೆ ಪ್ರದಾನ ಮಾಡಿ ಪೂಜ್ಯರು ಮಾತನಾಡಿದರು.
ಸಿರಿಗನ್ನಡ ವೇದಿಕೆ ಅಧ್ಯಕ್ಷ ಡಾ.ಗವಿಸಿದ್ಧಪ್ಪ ಪಾಟೀಲ ಮಾತನಾಡಿ, ಮಲ್ಲಿನಾಥ ಹಿರೇಮಠ ಅವರು ಶಿಕ್ಷಕರಾಗಿ ವಿದ್ಯಾರ್ಥಿ ಮನ ತೀಡಿದವರು, ಕೋಹಿನೂರು, ಮುಡಬಿ ವಲಯದ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ, ಜೊತೆಗೆ ಹಾರಕೂಡ ಮಠದ ಸೇವೆಗೆ ತೊಡಗಿಕೊಂಡವರು. ಅನೇಕ ಕೃತಿ ಸಂಪಾದಿಸಿದ್ದಾರೆ. ಅವರ ಕನ್ನಡ ಭಾಷೆ, ಸಾಹಿತ್ಯ ಸಾಂಸ್ಕೃತಿಕ ಕೊಡುಗೆ ಗುರುತಿಸಿ ಆಧ್ಯಾತ್ಮ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ ಎಂದರು.
ಕಾಡಾದ ಅಧ್ಯಕ್ಷರಾದ ಬಾಬು ಹೊನ್ನಾ ನಾಯಕ ಅವರು ಅಧ್ಯಕ್ಷತೆ ವಹಿಸಿದ್ದರು. ಡಾ.ರಾಜಕುಮಾರ ಮಾಳಗೆ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ.ಸಿದ್ಧಪ್ಪ ಹೊಸಮನಿ ನಿರೂಪಿಸಿದರು. ಪ್ರೊ.ಭದ್ರೇಶ ವಂದಿಸಿದರು. ಶಿವಕುಮಾರ ಡೋಲೆ ಮತ್ತಿತರ ಗಣ್ಯರು ಇದ್ದರು.


